Breaking
23 Mar 2026, Mon

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕ್ಯಾಂಪಸ್ಸಿಗೆ ಅಬ್ಬಕ್ಕ ರಥಯಾತ್ರೆ ಆಗಮನ

ಪುತ್ತೂರು: ದೇಶದ ಚರಿತ್ರೆಯಲ್ಲಿ ನೆಲದ ಅಸ್ವಿತ್ವದ ಪ್ರಶ್ನೆ ಬಂದಾಗ ತಾಯಿಯಂದಿರು ಶತ್ರುಗಳನ್ನು ಹೊಡೆದು ಬಡಿದಾಡಿದ ಪರಂಪರೆಯಿದೆ. ಅಂತಹುದರಲ್ಲಿ ಪರಕೀಯರು ತುಳುನಾಡಿಗೆ ಲಗ್ಗೆ ಇಡದಂತೆ ಮಾಡಿದವರು ತಾಯಿ ಅಬ್ಬಕ್ಕ. ಧೀರವನಿತೆ ಅಬ್ಬಕ್ಕನ ಚರಿತ್ರೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅ.ಭಾ.ವಿ.ಪ ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಪುತ್ತೂರು ಜಿಲ್ಲೆಯ ವತಿಯಿಂದ ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ 500 ಜಯಂತ್ಯೋತ್ಸವ ಪ್ರಯುಕ್ತ ರಥಯಾತ್ರೆ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿಯ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ತುಳುನಾಡು ರಾಣಿ ಅಬ್ಬಕ್ಕನಂತಹ ವೀರಮಣಿಗಳನ್ನು ಕೊಡುಗೆಯಾಗಿ ನೀಡಿದೆ. ಆಕೆ ಭಾರತದ ಅಸ್ಮಿತೆಯನ್ನು ಉಳಿಸಲು ಹೋರಾಡಿದ್ದಾಳೆ. ಪೊರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ತನ್ನ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾಳೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ದೇಶಕ್ಕೋಸ್ಕರ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕ. ಅಂತಹ ಸ್ವಾತಂತ್ರ‍್ಯ ಹೋರಾಟಗಾರರ ಜೀವನಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ ಕಿಚ್ಚನ್ನು ತುಂಬಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಎಂ.ಕೆ. ಕೃಷ್ಣ ಭಟ್, ಅ.ಭಾ.ವಿ.ಪ ಪುತ್ತೂರು, ಜಿಲ್ಲಾ ಸಂಚಾಲಕ ಸಮನ್ವಿತ್ ಕೆ. ಹಾಗೂ ಅ.ಭಾ.ವಿ. ಪ.ನ ಪ್ರತಿನಿಧಿಗಳು, ವಿದ್ಯಾವರ್ಧಕ ಸಂಘದ ವಿವಿಧ ಸಂಸ್ಥೆಗಳ ಪ್ರಾಚಾರ್ಯಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ವಿದ್ಯಾಲಕ್ಷ್ಮಿ ಪ್ರಾರ್ಥಿಸಿ, ಅ.ಭಾ.ವಿ.ಪ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್ ಕೆ. ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *