ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಪ. ಪೂ ಕಾಲೇಜು ಹಾಗೂ ಹಿಂದಿ ಸಂಘ ಇದರ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಹಿಂದಿ ದಿವಸ – 2025’ ದಿನಾಚರಣೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಮಾನಕ ಜ್ಯುವೆಲ್ಸ್ ನ ಮಾಲಕರಾದ ಸನದ್ ಕುಮಾರ್ ಎಸ್. ಕೆ ಮಾತನಾಡಿ, ಹಿಂದಿ ಭಾಷೆಯ ಮಹತ್ವವನ್ನು ಹೇಳುತ್ತಾ, ಹಿಂದಿಯು ನಮ್ಮ ದೇಶದಲ್ಲಿ ವಿಸ್ತೃತವಾಗಿ ಪಸರಿಸಿರುವುದರಿಂದ ಸಂಪರ್ಕಕ್ಕೆ ಅಡಿಪಾಯದಂತೆ ಇದೆ. ಹಿಂದಿಯು ಭಾರತ ದೇಶದಲ್ಲಿನ ವಿವಿಧ ಭಾಗಗಳ ಜನರಲ್ಲಿ ಸ್ನೇಹ, ಭಾಂದವ್ಯ ಬೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಶದಲ್ಲಿ ಹೆಚ್ಚಿನ ಭಾಗಗಳಲ್ಲಿ ಮಾತನಾಡಲ್ಪಡುವ ಭಾಷೆಯಾಗಿರುವುದರಿಂದ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅಂಜರಿಕೆ ಮುಂತಾದವುಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತ ಮಾತನಾಡಿ, ಪೂರ್ತಿ ಭಾರತ ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ದೇಶಿ ಭಾಷೆ ಹಿಂದಿಯೊಂದಿಗೆ ಇತರ ಭಾಷೆಗಳನ್ನು ಕಲಿಯುವುದರಿಂದ ನಮಗೆ ಹೆಚ್ಚಿನ ಉಪಯೋಗವಿದೆ. 1949 ಸೆಪ್ಟೆಂಬರ್ 14ರಂದು ಸಂವಿಧಾನದ ಮಾನ್ಯತೆಯನ್ನು ಪಡೆದ ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಿದರು.

ಹಿಂದಿ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಭೂಮಿಕಾ ಎ ಸ್ವಾಗತಿಸಿ, ಅಹಿಲ್ ವಂದಿಸಿ, ಮುಹಮ್ಮದ್ ಶಂಹಾನ್ ಹಂಟ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾದ ಡಾ. ಆಶಾ ಸಾವಿತ್ರಿ ಹಾಗೂ ಹಿಂದಿ ಸಂಘದ ನಿರ್ದೇಶಕರಾದ ಡಾ. ಬಿ. ಲತಾ, ಕಾಲೇಜಿನ ಬೋಧಕ/ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



