ಕಲ್ಲಡ್ಕ : ಬಂಟ್ವಾಳ ತಾಲೂಕಿನ ಗೋಳ್ತಮಜಲು, ಬಾಳ್ತಿಲ, ವೀರಕಂಭ, ಅಮ್ಮ್ಟೂರ್, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 171ನೇ ಜನ್ಮದಿನಾಚರಣೆ ಪ್ರಯುಕ್ತ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಗುರುಪೂಜೆ, ಭಜನಾ ಸಂಕೀರ್ತನೆ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಹಾಗೂ ಬಂಟ್ವಾಳ ಅಧ್ಯಕ್ಷರಾದ ಪ್ರೊಫೆಸರ್ ತುಕಾರಾಮ ಪೂಜಾರಿ ಅವರು ಆಡಂಬರ ಜೀವನಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ಒತ್ತು ನೀಡಿ. ಮದುವೆ ಮದರಂಗಿ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರತಿಷ್ಠೆಯ ನೆಪದಲ್ಲಿ ಮೂಲ ಆಚರಣೆಗಳನ್ನು ಬಿಟ್ಟು ಅನಗತ್ಯ ಖರ್ಚುಗಳನ್ನು ಮಾಡಿ ಸಾಲಗಾರರು ಆಗದೆ ಸರಳವಾಗಿ ಮಾಡಿ ಎಂದು ಕರೆ ನೀಡಿದರು.

ಈ ವೇಳೆ ಶ್ರೀ ಶಾರದಾಂಬ ಭಜನಾ ಮಂದಿರ ಶೃಂಗಗಿರಿ ಗುಂಡಿ ಮಜಲು ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ಹಾಗೂ ಕೇಶವ ಶಾಂತಿ ರವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಗುರು ಪೂಜೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಬಳಿಕ ಸಂಘದ ಗೌರವ ಅಧ್ಯಕ್ಷ ಮಾಜಿ ಶಾಸಕ ರುಕ್ಮಯ ಪೂಜಾರಿ, ಹಾಗೂ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಯವರ ನೇತೃತ್ವದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ವಸಂತ ಪೂಜಾರಿ ಬಟ್ಟಹಿತ್ತಿಲು ಸ್ವಾಗತಿಸಿ, ಸಂತೋಷ್ ಕುಮಾರ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು.



