ಪುತ್ತೂರು: ತಾಲೂಕಿನ ಕಾಣಿಯೂರು ಸಮೀಪದ ಪುಣ್ಚತ್ತಾರು ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪೆರ್ಲಂಪಾಡಿ ನಿವಾಸಿ ಉದಯ ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ, ಕಾಲೇಜು ವಿದ್ಯಾರ್ಥಿನಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ಅಪರಿಚಿತ ಯುವಕನೊಬ್ಬ ಕಿರುಕುಳ ನೀಡಿದ್ದ.

ಈ ಘಟನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ, ಮನೆಯವರೊಂದಿಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಆದರೆ, ಸಂತ್ರಸ್ತೆಗೆ ಆರೋಪಿಯ ಗುರುತು ವಿದ್ಯಾರ್ಥಿನಿಗೆ ತಿಳಿದಿರಲಿಲ್ಲ. ಇದು ಪೊಲೀಸರ ತನಿಖೆಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಪೊಲೀಸರು ಘಟನೆ ನಡೆದ ಸ್ಥಳದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 15 ಸಿ ಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

ವಿದ್ಯಾರ್ಥಿನಿ ನೀಡಿದ ವಿವರಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ತಾಳೆ ನೋಡಿದಾಗ, ನಿರ್ದಿಷ್ಟ ಸಮಯದಲ್ಲಿ ಆ ಮಾರ್ಗದಲ್ಲಿ ಹಾದುಹೋಗಿದ್ದ ಒಂದು ಬೈಕ್ ನ ಮಾದರಿ ಮತ್ತು ಸಂಖ್ಯೆಯ ಆರೋಪಿಯ ಮಾಹಿತಿ ಲಭಿಸಿದೆ.
ಬೆಳ್ಳಾರೆ ಠಾಣಾ ಎಸ್ಐ ಡಿ.ಎನ್. ಈರಯ್ಯ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.


