ಕಾರ್ಕಳ : ಗಂಡನನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ಸೆ. 7ರಂದು ನಡೆದಿದೆ.
ಘಟನೆಯಲ್ಲಿ ಪತಿ ಶೇಖರ್ ಮೂಲ್ಯ ಎಂಬವರು ಗಂಭೀರ ಗಾಯಗೊಂಡಿದ್ದು, ಮಾಲತಿ ಮೂಲ್ಯ ಕೊಲೆ ಯತ್ನ ಮಾಡಿರುವ ಆರೋಪಿಯಾಗಿದ್ದಾರೆ. ಮಾಲತಿ ಮೂಲ್ಯ ಅವರು ಶೇಖರ್ ಮೂಲ್ಯರಿಗೆ ಕತ್ತಿಯಿಂದ ಕಡಿದು ಬಳಿಕ ಮಗಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆಗೈದು ಅವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾಳೆ.

ಆಕೆ ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಶೇಖರ್ ಮೂಲ್ಯರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ದಾಖಲು ಮಾಡಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಮಾಲತಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯ ಸಂಗತಿ ಬಯಲಾಗಿದೆ.

ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣ ನಾನೇ ಗಂಡನಿಗೆ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ. ಆರೋಪಿ ಮಾಲತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



