ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಬಳಿ ಸ್ಕೂಟರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಆಗಸ್ಟ್ 12ರ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ ಯಾನೆ ರಘು (44) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟಿಕಲ್ ಗುತ್ತಿಗೆದಾರರಾಗಿದ್ದ ಕೆಲಸ ನಿರ್ವಹಿಸುತ್ತಿದ್ದರು.

ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರಾಘವೇಂದ್ರ ಅವರ ತಲೆಗೆ ರಸ್ತೆ ಬದಿಯ ಆವರಣ ಗೋಡೆಗೆ ಬಡಿದು, ತೀವ್ರ ರಕ್ತಸ್ರಾವ ಉಂಟಾಯಿತು. ಆಂಬುಲೆನ್ಸ್ ಸ್ಥಳಕ್ಕೆ ಬರಲು ತಡವಾದ ಕಾರಣ ಸ್ಥಳೀಯ ಯುವಕರು ಆಟೋ ರಿಕ್ಷಾದಲ್ಲಿ ಗಾಯಾಳು ರಾಘವೇಂದ್ರ ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಾಯಿ, ಪತ್ನಿ ಮತ್ತು ಏಕೈಕ ಗಂಡು ಮಗುವನ್ನ ಅಗಲಿದ್ದಾರೆ.


