ಬಂಟ್ವಾಳ : ಸೈನಿಕನ ಪ್ರತಿಯೊಂದು ಹೆಜ್ಜೆಯಲ್ಲೂ ದೇಶಭಕ್ತಿಯ ಸ್ಪಂದನೆ ಇರುತ್ತದೆ ಅವರನ್ನು ಗೌರವಿಸುವುದು, ದೇಶವನ್ನು ಗೌರವಿಸಿದಂತೆಯೇ ಎಂದು ಬೆಂಜನಪದವ್ ಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶಶಿಕಲಾ ಹೇಳಿದರು.

ಅವರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ತಾಲೂಕು ಹಾಗೂ ಸ್ಥಳೀಯರ ಸಹಕಾರದಿಂದ ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಧ್ವಜಸ್ತಂಬ ಉದ್ಘಾಟನೆಯ ಬಳಿಕ ನಿವೃತ್ತ ಸೈನಿಕರನ್ನು ಹಾಗೂ ಸಹಕಾರ ನೀಡಿದವರನ್ನು ಅಭಿನಂದಿಸಿ ಮಾತನಾಡಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಮೋನಪ್ಪ ಪೂಜಾರಿ ಬಿ ಎಂ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶಕ್ಕೆ ಗೌರವ ತರುವಂತ ಧ್ವಜಸ್ತಂಭವನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮನವಿಗೆ ಸ್ಪಂದಿಸಿ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಿದ್ದು, ತಮ್ಮ ಸಂಸ್ಥೆಯು ದೇಶ ಪ್ರೇಮ ದೇಶಾಭಿಮಾನದ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿ ಸುಮತಿ ಮೋನಪ್ಪ, ನಿವೃತ್ತ ಸೈನಿಕರಾದ ಅನೀಶ್ ಆಚಾರ್ಯ, ಜಗದೀಶ್ ಕುಮಾರ್, ಡಿಕೇಶ ಪೂಜಾರಿ, ಸ್ಥಳೀಯರಾದ ರಾಧಾಕೃಷ್ಣ ತಂತ್ರಿ, ಶ್ರೀಧರ ಪೂಜಾರಿ, ಹಾಗೂ ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.


