ಬಂಟ್ವಾಳ: ಕರಾವಳಿಯ ಪ್ರಮುಖ ಬೆಳೆಗಳಲ್ಲಿ ಒಂದಾದ ಅಡಿಕೆಯು ಸಾವಿರಾರು ರೈತರ ಜೀವನಾಧಾರವಾಗಿದ್ದು ಕರಾವಳಿಯ ವಿವಿಧ ಭಾಗಗಳಿಂದ ಅಡಿಕೆ ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದ್ದು, ಕೆಲವು ದಿನಗಳಿಂದ ಮಹಾರಾಷ್ಟ್ರದ ಕೆಲವೊಂದು ಸ್ಥಳಗಳಲ್ಲಿ ಅಡಿಕೆ ಸಾಗಾಟ ವಾಹನಗಳನ್ನು ಅಧಿಕಾರಿಗಳು ಅನಗತ್ಯ ತಪಾಸಣೆ ಮಾಡುತ್ತಿರುವುದರಿಂದ ಸಾಗಣೆಯಾಗುತ್ತಿರುವ ಅಡಿಕೆ ಲಾರಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಸಮಸ್ಯೆಯಿಂದ ಅಡಿಕೆ ಬೆಲೆ ಕುಸಿದಿರುವ ಪರಿಣಾಮ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ನಿಯೋಗ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮುಂದಾಳತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರ ವೇದನೆ ಮತ್ತು ವ್ಯಾಪಾರಿಗಳು ಅನುಭವಿಸುವ ಕಷ್ಟಗಳ ಬಗ್ಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಕರಾವಳಿಯಲ್ಲಿ ಅಡಿಕೆ ಬೆಲೆ ಕೊಂಚ ಚೇತರಿಕೆ ಕಂಡಿರುವುದು ಅಡಿಕೆ ಬೆಳೆಗಾರರ ಮನದಲ್ಲಿ ಸಂತಸ ಮೂಡಿದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಯೋಗದ ಭೇಟಿ ಫಲಪ್ರದವಾಗಿದ್ದು ನಿಯೋಗದಲ್ಲಿ ಭಾಗವಹಿಸಿರುವ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಶಾಸಕ ಅರಗ ಜ್ಞಾನೇಂದ್ರ , ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳಿಗೆ ಕರಾವಳಿ ಅಡಿಕೆ ಬೆಳೆಗಾರರ ಪರವಾಗಿ ಪ್ರಭಾಕರ ಪ್ರಭು ಅಭಿನಂದನೆ ಸಲ್ಲಿಸಿದ್ದಾರೆ.









