ಬಳ್ಳಾರಿ: ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿತ್ಯ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ, ರಾಜಿ ಪಂಚಾಯತಿಗೆ ಬಂದಿದ್ದ ಪತ್ನಿ ಹಾಗೂ ಮಾವನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಬಳ್ಳಾರಿಯ ಗುಗ್ಗರ ಹಟ್ಟಿಯಲ್ಲಿ ಮಂಗಳವಾರ (ಜು. 7) ನಡೆದಿದೆ.

ಮೃತರನ್ನು ನಾಗಲಕ್ಷ್ಮೀ (24) ಹಾಗೂ ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜು (29) ಹಾಗೂ ಆತನ ತಂದೆ ಗುರುಶಂಕರ (50) ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರೂ ಆರೋಪಿಗಳಾಗಿದ್ದಾರೆ.

ಆರೋಪಿಗಳು ದೋಬಿ (ಇಸ್ತ್ರಿ) ಕೆಲಸ ಮಾಡಿಕೊಂಡಿದ್ದು, ತೇಜು ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜಿ ಪಂಚಾಯತಿ ನಡೆಸಲು ನಾಗಲಕ್ಷ್ಮೀ ಅವರ ತಂದೆ ಶ್ರೀನಿವಾಸ ಮನೆಗೆ ಬಂದಿದ್ದ ವೇಳೆ ವಾಗ್ವಾದ ತಾರಕಕ್ಕೇರಿ, ತೇಜು ಮತ್ತು ಆತನ ತಂದೆ ಚಾಕುವಿನಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ನಾಗಲಕ್ಷ್ಮೀ ಮತ್ತು ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



