ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು.

ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ. ಆರ್. ಅವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ತಾಯಿ ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟುಬದ್ದವಾಗಿ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಇತ್ತೀಚಿನ ವರುಷಗಳಲ್ಲಿ ಪ್ರಾರಂಭಿಸಿರುವ ಕ್ರಿಟಿಕಲ್ ಕೇರ್ ಯೂನಿಟ್, ಐ.ಸಿ.ಯು,ಎನ್.ಐ.ಸಿ.ಯು, ಗೈನೆಕ್ ಆಂಕೋಸರ್ಜಿಕಲ್ ಯೂನಿಟ್ ಸ್ತ್ರೀಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿರುವುದು ಮಾತ್ರವಲ್ಲದೆ ಆ ಮೂಲಕ ತಾಯಿ ಮರಣವನ್ನು ಕನಿಷ್ಠ ಮಟ್ಟಕ್ಕೆ ತಂದಿರುವುದನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಮೋಡ್ಯೂಲರ್ ಕಿಚನ್ ಹಾಗೂ ಮೇಲ್ದರ್ಜೆಗೇರಿಸಲ್ಪಡುವ ಎನ್.ಐ.ಸಿ.ಯು.ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಲಿದೆ ಎಂದರು. ಎಲ್ಲಾ ಸಿಬ್ಬಂದಿಗಳು ಐಕ್ಯತೆಯನ್ನು ಪ್ರದರ್ಶಿಸಿ, ಗಣರಾಜ್ಯೋತ್ಸವ ಆಚರಣೆಯ ಈ ಶುಭ ಸಮಾರಂಭಕ್ಕೆ ಶೋಭೆ ತರಬೇಕೆಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಯೂನಿವರ್ಸಿಟಿ ಕಾಲೇಜು ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಾದ ಕೆಡೆಟ್ ಶುಭ ಲಕ್ಷ್ಮಿ ಮತ್ತು ಕೆಡೆಟ್ ಅನೂಪ ಇವರನ್ನು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಹಾಗೂ ಶ್ರೀನಾಥ್ ಶೇಟ್ ಮತ್ತು ಕಿಶೋರ್ ಕುಮಾರ್ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಹಿರಿಯ ತಜ್ಞರಾದ ಡಾ. ದಯಾನಂದ್, ಡಾ. ರವಿಕುಮಾರ್, ತ್ರೇಸಿಯಮ್ಮ, ಅಂಬಿಕಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





