ಮಂಗಳೂರು: ಹೊಂಡಕ್ಕೆ ಬಿದ್ದ ಶ್ವಾನವನ್ನು ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ರಕ್ಷಿಸಿದ ಘಟನೆ ಮಂಗಳೂರಿನ ಬೆಂದೂರು ಬಳಿ ಇಂದು (ಸೆ.17) ಬೆಳಿಗ್ಗೆ ನಡೆದಿದೆ.
ನಗರದ ಬೆಂದೂರು ಬಳಿ ಗೇಲ್ ಗ್ಯಾಸ್ ಕಂಪೆನಿಯವರು ಅಗೆದ ಹೊಂಡವನ್ನು ಮುಚ್ಚದೇ ಬಿಟ್ಟ ಪರಿಣಾಮ ನಾಯಿ ಹೊಂಡಕ್ಕೆ ಬಿದ್ದಿದೆ.

ನಾಯಿ ಅಳುತ್ತಿರುವ ಶಬ್ದ ಕೇಳಿದ ತಕ್ಷಣವೇ ಸ್ಥಳೀಯರು ಅನಿಮಲ್ ಕೇರ್ ಟ್ರಸ್ಟ್ಗೆ ಮಾಹಿತಿ ನೀಡಿದ್ದು, ಅವರ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಶ್ವಾನವನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಅಲ್ಪ ಗಾಯಗಳಿಂದ ಬಳಲುತ್ತಿದ್ದ ಶ್ವಾನಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಟ್ರಸ್ಟ್ನ ಆಶ್ರಯದಲ್ಲಿ ಆರೈಕೆಗೆ ಒಯ್ಯಲಾಯಿತು.

ಸ್ಥಳೀಯ ನಿವಾಸಿಗಳು ಗೇಲ್ ಗ್ಯಾಸ್ ಕಂಪೆನಿಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದು, “ಸಾರ್ವಜನಿಕ ಸ್ಥಳಗಳಲ್ಲಿ ಹೊಂಡಗಳನ್ನು ಅಗೆದು ಬಿಟ್ಟಿರುವುದು ಗಂಭೀರ ನಿರ್ಲಕ್ಷ್ಯ. ಇದರಿಂದ ಮಕ್ಕಳಿಗೂ, ವಯೋವೃದ್ಧರಿಗೂ, ವಾಹನ ಸವಾರರಿಗೂ ಅಪಾಯ ಉಂಟಾಗಬಹುದು. ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.



