ಕುಂದಾಪುರ: ವ್ಯಕ್ತಿಯೋರ್ವ ಅಡವಿಟ್ಟ ಫ್ಲ್ಯಾಟ್ ಮಾರಾಟ ಮಾಡಿ ಬ್ಯಾಂಕಿಗೆ ವಂಚಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಮರವಂತೆಯ ಮೊಹಮ್ಮದ್ ಶಾಕಿರ (39) ಬ್ಯಾಂಕ್ಗೆ ವಂಚನೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯಾಗಿದ್ದಾನೆ.

ಆರೋಪಿಯು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಅಡಮಾನ ಇರಿಸಿದ್ದ ಫ್ಲ್ಯಾಟ್ ಅನ್ನು ಮಾರಾಟ ಮಾಡಿ ಬ್ಯಾಂಕಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಕೋಟೇಶ್ವರ ಗ್ರಾಮದ ‘ಜ್ಯೂಲಿ ಯೋ ರೆಸಿಡೆನ್ಸಿ’ ನೆಲಮಹಡಿಯಲ್ಲಿರುವ ಅಪಾರ್ಟ್ಮೆಂಟ್ ನಂಬ್ರ 7ನ್ನು ಅಡಮಾನವಿರಿಸಿ ಮೊಹಮ್ಮದ್ 55 ಲಕ್ಷ ರೂ. ಸಾಲ ಪಡೆದುಕೊಂಡಿದ್ದ.
ಆರೋಪಿಯೂ ಮೂಲ ದಾಖಲೆಗಳು ಬ್ಯಾಂಕ್ನಲ್ಲಿರುವಾಗಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯಲ್ಲಿ 45 ಲಕ್ಷ ರೂ. ಸಾಲ ಪಡೆಯಲು ಯತ್ನಿಸಿದಾಗ ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣ ದಾಖಲಾಗಿದೆ.

ಹಾಗಿದ್ದರೂ ಆರೋಪಿಯು ಆ ಫ್ಲ್ಯಾಟ್ ಅನ್ನು ಇನ್ನೊಬ್ಬ ಆರೋಪಿ ವಸಂತ ಕುಮಾರ ಕಿದಿಯೂರು ಹೆಸರಿನಲ್ಲಿ ಕುಂದಾಪುರ ಉಪನೋಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಂಡು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕುಂದಾಪುರ ಶಾಖೆಗೆ ನಂಬಿಕೆ ದ್ರೋಹ ಎಸಗಿ ವಂಚಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರೆದಿದೆ.



