ಮಂಗಳೂರು: ಕಳೆದ 26 ವರ್ಷದ ಹಿಂದೆ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಲೀಲಾಧರ್( 52) ಮತ್ತು ಚಂದ್ರಹಾಸ್ ಕೇಶವ್ ಶೆಟ್ಟಿ(59) ಸೆರೆಯಾಗಿರುವ ಆರೋಪಿಗಳು.

ಡಿಸೆಂಬರ್ 31, 1998ರಂದು ಮೂಲ್ಕಿಯ ಹಳೆಯಂಗಡಿಯಲ್ಲಿ ಭುಗಿಲೆದ್ದ ಕೋಮು ಗಲಭೆಯ ಆರೋಪಿಗಳಾಗಿದ್ದ ಇವರಿಬ್ಬರು ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಸದ್ಯ ಬಂಧನಕ್ಕೆ ಒಳಗಾಗಿರುವ ಆರೋಪಿಗಳಲ್ಲಿ ಲೀಲಾಧರ್ ಎಂಬಾತ ವಿದೇಶದಿಂದ ಹಿಂದಿರುಗಿ ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮೂಲ್ಕಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಪ್ರಕರಣದ ಇನ್ನೋರ್ವ ಆರೋಪಿ ಹಳೆಯಂಗಡಿಯ ಪೆಡುಪಣಂಬೂರಿನ ಚಂದ್ರಹಾಸ ಕೇಶವ ಶೆಟ್ಟಿ ಎಂಬಾತ ದುಬೈಗೆ ಪರಾರಿಯಾಗಿದ್ದು ಕಳೆದ ಆಗಸ್ಟ್ 30ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಆತನಿಗೂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.



