ಉಡುಪಿ: ಸಮುದ್ರದಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟು, ಓರ್ವ ಗಂಭೀರವಾಗಿ ಅಸ್ವಸ್ಥಗೊಂಡು, ಇನ್ನೋರ್ವ ನಾಪತ್ತೆಯಾದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾ.ಪಂ ವ್ಯಾಪ್ತಿಯ ಚರ್ಕಿಕಡು ಎಂಬಲ್ಲಿನ ಕಡಲ ತೀರದಲ್ಲಿ ಸೆ.7ರಂದು ನಡೆದಿದೆ.

ಮೃತರನ್ನು ಬೆಂಗಳೂರಿನ ಗೌತಮ್(19), ಲೋಕೇಶ್(19), ಆಶೀಶ್(18) ಎಂದು ಗುರುತಿಸಲಾಗಿದೆ. ನಿರೂಪ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದು, ತಕ್ಷಣವೇ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಪ್ರವಾಸಿಗರ ತಂಡ ಕುಂಭಾಶಿ ಗಾಯತ್ರಿ ಕಂಫರ್ಟ್ನಲ್ಲಿ ವಾಸ್ತವ್ಯ ಹೂಡಿತ್ತು. ಇವರಲ್ಲಿ ಒಂಬತ್ತು ಜನ ಸಮುದ್ರ ವೀಕ್ಷಣೆಗೆ ಗೋಪಾಡಿ ಸಮುದ್ರ ತೀರಕ್ಕೆ ಬಂದಿದ್ದು, ಏಳು ಜನ ಯುವಕರು ಸಮುದ್ರದ ತೀರದಲ್ಲಿ ಆಟವಾಡುತ್ತಾ ನೀರಿಗೆ ಇಳಿದಿದ್ದರು.

ಅಲೆಗಳ ಅಬ್ಬರಕ್ಕೆ ಐವರು ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು,ಈ ವೇಳೆ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರೆದಿದೆ ಎಂದು ತಿಳಿದುಬಂದಿದೆ.



