ಮೂಡುಬಿದಿರೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಹಾಗೂ ಸಂದೇಶಗಳನ್ನು ರವಾನಿಸಿದ ಆರೋಪದ ಮೇಲೆ ಮೂಡುಬಿದಿರೆಯ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಸಿಬ್ಬಂದಿ ಕೊಪ್ಪಳ ಮೂಲದ ಶಾಂತಪ್ಪ ಎಂಬಾತನ ಮೇಲೆ ಪ್ರಕರಣ ದಾಖಲಾಗಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.

ಕೌಟುಂಬಿಕ ಸಮಸ್ಯೆ ಬಗ್ಗೆ ತೋಡಾರು ಬಳಿಯ ವಿವಾಹಿತೆಯೋರ್ವರು ಆ. 23ರಂದು ಮೂಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು ಬಳಿಕ ಪತಿ ಮತ್ತು ಪತ್ನಿಯನ್ನು ಕರೆಸಿ ಮಧ್ಯಸ್ಥಿಕೆ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು.

ಬಳಿಕ ಆರೋಪಿಯು ದೂರಿನ ಪ್ರತಿಯಲ್ಲಿ ಬರೆಯಲಾಗಿದ್ದ ಮಹಿಳೆಯ ನಂಬರ್ ತೆಗೆದು ಆಕೆಯೊಂದಿಗೆ ಮಾತುಕತೆ ನಡೆಸಿದ್ದ ಎನ್ನಲಾಗಿದೆ. ಮಹಿಳೆಯು ಆತನ ಧ್ವನಿಮುದ್ರಿಸಿ ದಾಖಲೆ ಸಹಿತ ಸೆ. 1ರಂದು ದೂರು ನೀಡಿದ್ದರು. ಮೇಲಧಿಕಾರಿಗಳ ಆದೇಶದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಪ್ರಕರಣ ದಾಖಲಿಸಿಕೊಂಡು ಕ್ರಮ ಜರಗಿಸಿದ್ದಾರೆ.



