ಬಂಟ್ವಾಳ: ವಕೀಲರ ಸಂಘ, ಬಂಟ್ವಾಳ ಇದರ ಆಶ್ರಯದಲ್ಲಿ 6ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಆ.16 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ‘ಪ್ರಥಮ್ ಬಂಗೇರ ಚಾವಡಿ’ಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಬಂಟ್ವಾಳ ಹಿರಿಯ ಸಿವಿಲ್ ಜೆ.ಎಂ.ಎಫ್. ಸಿ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ. ಪಿ. ಉದ್ಘಾಟಿಸಿದರು.

ಅತಿಥಿಯಾಗಿದ್ದ ಬಂಟ್ವಾಳ ಪ್ರಧಾನ ಸಿವಿಲ್ ಮತ್ತು ಜೆ. ಎಮ್. ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಮೂರ್ತಿ ಎನ್ ಅವರು ಮಾತನಾಡಿ, ಇತಿಹಾಸ ಎಂದೂ ಮರೆಯಬಾರದು, ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಮುನ್ನಡೆಯುವ ಜವಾಬ್ದಾರಿ ಮುಂದಿನ ಯುವಪೀಳಿಗೆಗಿದೆ. ತುಳುನಾಡಿನ ಪ್ರತಿಯೊಂದು ತಿಂಡಿ, ತಿನಸು ಗಳಿಗೂ ವೈದ್ಯಕೀಯವಾದ ಸಂಬಂಧವಿದೆ ಎಂಬುದನ್ನು ನಾನು ದ.ಕ.ಜಿಲ್ಲೆಗೆ ಬಂದ ಬಳಿಕ ಚೆನ್ನಾಗಿ ಅರಿತುಕೊಂಡಿದ್ದೇನೆ ಎಂದರು.

ವಕೀಲರ ಸಂಘ ಅಧ್ಯಕ್ಷ ರಿಚರ್ಡ್ ಎಂ. ಕೋಸ್ತ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಹೆಚ್ಚುವರಿ ಸಿವಿಲ್ ಜೆ.ಎಂ. ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ. ಎಸ್ ಉಪಸ್ಥಿತರಿದ್ದರು.
ಶಿಕ್ಷಕಿ, ತುಳು ಬರಹಗಾರ್ತಿ ರೇಣುಕಾ ಕಾಣಿಯೂರು ಮಾತನಾಡಿದರು.

ಇದೇ ವೇಳೆ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದ ವಿದ್ಯಾರ್ಥಿನಿ, ವಕೀಲ ಸದಾಶಿವ ನಾಯಕ್ ಅವರ ಪುತ್ರಿ ವಿಶ್ಲೇಶ್ವರಿ ನಾಯಕ್ ಅವರನ್ನು ಅಭಿನಂದಿಸಲಾಯಿತು. ವಕೀಲರು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಕೂಟ ಆಯೋಜಿಸಿ ಕುಣಿದು, ಕುಪ್ಪಳಿಸಿದರು.
ಸಂಘದ ಕಾರ್ಯದರ್ಶಿ ನರೇಂದ್ರನಾಥ್ ಭಂಡಾರಿ ಸ್ವಾಗತಿಸಿ, ವಕೀಲರಾದ ಸುಂದರ ಬಾಚಕೆರೆ ವಂದಿಸಿ, ದೀಪಕ್ ಪೆರಾಜೆ ಅಭಿನಯ ಚಿದಾನಂದ ನಿರೂಪಿಸಿದರು.



