ಮಂಗಳೂರು: ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಕುರಿತು ಗೌರವ ಮತ್ತು ಜವಾಬ್ದಾರಿ ಮೂಡಿಸುವ ಸಲುವಾಗಿ, ಹಿಂದೂ ಜನಜಾಗೃತಿ ಸಮಿತಿಯು ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಈ ಅಭಿಯಾನದ ಭಾಗವಾಗಿ ಮಂಗಳೂರು ನಗರದ 68 ಶಾಲಾ – ಕಾಲೇಜುಗಳಲ್ಲಿ ಭಾಷಣ, ಪ್ರಶ್ನೋತ್ತರ ಸ್ಪರ್ಧೆಗಳು, ದೇಶಭಕ್ತರ ಫಲಕ ಪ್ರದರ್ಶನ, ಮಾಹಿತಿ ಕರಪತ್ರಗಳ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಕ್ತಿ ಸ್ಕೂಲ್, ರಾಮಕೃಷ್ಣ ಶಾಲೆ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಮುಂತಾದ ಶಾಲೆಗಳಲ್ಲಿ 2200ಕ್ಕೂ ಅಧಿಕ ಮಕ್ಕಳು ಭಾಗಿಯಾದರು.

ಬಳಿಕ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮನವಿಯನ್ನು ನೀಡಲಾಯಿತು.

ಅಭಿಯಾನದ ಪ್ರಮುಖ ಅಂಶಗಳು :
ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ: ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಸ್ತೆಗಳಲ್ಲಿ, ಕಸದ ತೊಟ್ಟಿಗಳಲ್ಲಿ ಮತ್ತು ಚರಂಡಿಗಳಲ್ಲಿ ಬಿದ್ದಿರುವ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳ ದುಸ್ಥಿತಿಯ ಬಗ್ಗೆ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಈ ರೀತಿಯ ಅಗೌರವವು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿಗಳಿಗೆ ಮಾಡುವ ಅವಮಾನವಾಗಿದೆ. ಇದನ್ನು ತಡೆಯಲು, ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮಹತ್ವದ ಬಗ್ಗೆ ತಿಳಿಸಲಾಯಿತು.

ಧ್ವಜ ಸಂಹಿತೆಯ ಪಾಲನೆ: ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಯಶಸ್ಸು ಕಂಡಿತ್ತು. ನ್ಯಾಯಾಲಯದ ಆದೇಶದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುತ್ತೋಲೆಯನ್ನು ಹೊರಡಿಸಿದ್ದರೂ, ಇನ್ನೂ ಪ್ಲಾಸ್ಟಿಕ್ ಧ್ವಜಗಳ ಬಳಕೆ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ದೇಶಪ್ರೇಮವನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪ್ರೇರೇಪಿಸಲಾಯಿತು.

ತ್ರಿವರ್ಣ ಮಾಸ್ಕ್ಗಳ ವಿರುದ್ಧ ಎಚ್ಚರಿಕೆ: ದೇಶಭಕ್ತಿಯ ಹೆಸರಿನಲ್ಲಿ ತ್ರಿವರ್ಣ ಮಾಸ್ಕ್ಗಳು, ಬಣ್ಣದ ಬಟ್ಟೆಗಳು ಮತ್ತು ಮುಖಕ್ಕೆ ಬಣ್ಣ ಬಳಿದುಕೊಳ್ಳುವುದು ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ. ಇದು ರಾಷ್ಟ್ರದ ಗೌರವದ ಅಪಮಾನ ನಿವಾರಣೆ ಅಧಿನಿಯಮ 1971ರ ಉಲ್ಲಂಘನೆಯಾಗಿದ್ದು, ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲು ಸಮಿತಿ ಉದ್ದೇಶಿಸಿದೆ.
ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿಯು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಲೆಯ ಶಿಕ್ಷಕರು, ಪೋಷಕರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಸದ್ಗುಣಗಳನ್ನು ಮೂಡಿಸಲು ಸಹಕಾರಿಯಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


