ಬೈಂದೂರು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಆ.19ರಂದು ನಡೆದಿದೆ.

ಮೃತರನ್ನು ಬೈಂದೂರಿನ ಮರವಂತೆ ಗ್ರಾಮದ ನಾಗರಾಜ ಖಾರ್ವಿ (40) ಎಂದು ಗುರುತಿಸಲಾಗಿದೆ. ನಾಗರಾಜ ಖಾರ್ವಿ ಅವರು ಬೆಳಗ್ಗೆ ಮರವಂತೆ ಬಂದರಿನಿಂದ ದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ದೋಣಿ ಸುಮಾರು 200 ಮೀಟರ್ ಸಮುದ್ರದೊಳಗೆ ಸಾಗುತ್ತಿದ್ದ ವೇಳೆ ಏಕಾಏಕಿ ಜೋರಾಗಿ ಗಾಳಿ ಬೀಸಿದೆ ಎನ್ನಲಾಗಿದೆ.

ಗಾಳಿಯ ರಭಸಕ್ಕೆ ದೋಣಿ ನೀರಿನಲ್ಲಿ ತೇಲಾಡಿದ ಪರಿಣಾಮ ನಾಗರಾಜ ಖಾರ್ವಿ ಅವರು ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಸಹ ಮೀನುಗಾರರು ಕೂಡಲೇ ಮೇಲಕ್ಕೆತ್ತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ನಾಗರಾಜ ಖಾರ್ವಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



