ಬಂಟ್ವಾಳ : ಕೇಂದ್ರದ ‘ವಿಬಿ-ಜಿ ರಾಮ್ ಜಿ ಯೋಜನೆ’ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪತ್ರಿಕೆಯಲ್ಲಿ ಬಹಿರಂಗ ಜಾಹೀರಾತು ನೀಡಿರುವ ಬಗ್ಗೆ ವಿರೋಧ ವ್ಯಕ್ತಪಡಿಸುವ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರಕಾರವು ಕೆಲವೊಂದು ತಿದ್ದುಪಡಿಯೊಂದಿಗೆ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ವಿವಿಧ ಭಂಗಿಯಲ್ಲಿ ಮಹಾತ್ಮ ಗಾಂಧೀ ಭಾವಚಿತ್ರ ಬಳಸಿಕೊಂಡು ಯೋಜನೆಯ ಬಗ್ಗೆ ಜನರಿಗೆ ಅಪನಂಬಿಕೆ ಬರುವ ರೀತಿಯಲ್ಲಿ ರಾಜ್ಯದ ಎಲ್ಲಾ ದೈನಿಕ ಪತ್ರಿಕೆಗಳಲ್ಲಿ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜ. 29 ರಂದು ನೀಡಿರುವ ಜಾಹೀರಾತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಜನರ ಭಾವನೆಗಳಿಗೆ ಧಕ್ಕೆ ತಂದಿರುವ ವಿಷಯ ಹಾಗೂ ಸರಕಾರದ ಹಣದಿಂದ ಈ ಜಾಹೀರಾತು ನೀಡಿರುವುದು ಸರಿಯಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ರಾಜಕೀಯ ನಾಯಕರು , ಯೋಜನೆಗಳ ಪರ-ವಿರೋಧ ಮಾತಾನಾಡುವುದು , ಜಾಹೀರಾತು ನೀಡುವುದು ಸಹಜವಾದ ಪ್ರಕ್ರಿಯೆ ಆದರೆ ಜನರ ತೆರಿಗೆಯ ಹಣದಿಂದ ವೇತನ ಪಡೆಯುತ್ತಿರುವ ಇಲಾಖೆಯ ಅಧಿಕಾರಿಗಳು ಇಲಾಖೆಯ ಹೆಸರಿನಲ್ಲಿ ಪ್ರಕಟಣೆಯನ್ನು ಕೇಂದ್ರ ಸರಕಾರದ ಯೋಜನೆಯ ವಿರುದ್ದ ನೀಡಿರುವ ಜಾಹೀರಾತು ಕೇಂದ್ರ ಸರಕಾರದ ವಿರುದ್ದ ನೀಡಿದ ಜಾಹೀರಾತಿಗೆ ಸಮಾನವಾಗಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಂಬಂಧಪಟ್ಟ ಅಧಿಕಾರಿಗಳ ಈ ರೀತಿಯ ಜಾಹೀರಾತಿನ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಾ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.




