ಬೈಂದೂರು: ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಶೈಕ್ಷಣಿಕ,ಸಾಮಾಜಿಕ,ಸೇವಾ ಸಂಸ್ಥೆ ಇದರ 18ನೇ ಮನೆ ಹಸ್ತಾಂತರ ಕಾರ್ಯಕ್ರಮ ಜ.26ರಂದು ಶಿರೂರು ಮೇಲ್ಪಂಕ್ತಿಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಏಕಜಾತಿ ಧರ್ಮ ಪೀಠ ದ್ವಾರಕಮಾಯಿ ಮಠ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ ಗುರುಜೀ ಅವರು ಬದುಕಿನ ಪಯಣದಲ್ಲಿ ದುಡಿದ ಒಂದಿಷ್ಟು ಸಂಪತನ್ನು ಸದ್ವಿನಿಯೋಗವಾದಾಗ ಸಾರ್ಥಕತೆ ಮೂಡುತ್ತದೆ. ಕಲಿಯುಗದಲ್ಲಿ ಮಾಡಿದ ಕರ್ಮಗಳಿಗೆ ಶೀಘ್ರ ಫಲಿತಾಂಶ ಸಿಗುತ್ತದೆ. ನಮ್ಮ ಧರ್ಮದ ರಕ್ಷಣೆ ನಮ್ಮ ಜವಬ್ದಾರಿ ಬಡವರ ಕಷ್ಟಕ್ಕೆ ಸ್ಪಂಧಿಸುವ ಹೃದಯಗಳಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ ಎಂದರು.

ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಿ ಮಾತನಾಡಿ ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ. ನಮಗೆ ಸಾಮರ್ಥ್ಯ ಇರುವಾಗ ಒಂದಿಷ್ಟು ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಸಂತೃಪ್ತಿ ಮೂಡುತ್ತದೆ. ಈಗಾಗಲೇ ಬೈಂದೂರು ವ್ಯಾಪ್ತಿಯಲ್ಲಿ ಟ್ರಸ್ಟ್ ಹಾಗೂ ವಯಕ್ತಿಕ ನೆಲೆಯಲ್ಲಿ ಅನೇಕ ಮನೆ ನಿರ್ಮಾಣ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ 18ನೇ ಮನೆ ಇದಾಗಿದ್ದು ಮತ್ತಷ್ಟು ಕಾರ್ಯಗಳು ಟ್ರಸ್ಟ್ ಮೂಲಕ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿಯವರನ್ನು ಮನೆಯವರ ವತಿಯಿಂದ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಾಬು ಪೂಜಾರಿ ಚಮ್ಮನಹಿತ್ಲು ಬಿಜೂರು, ಮಂಜಮ್ಮ ಪೂಜಾರಿ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಡುಪಿ ಜಿಲ್ಲಾ ರಾಷ್ಟೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ,ಕಲ್ಯಾಣಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮ ಪೂಜಾರಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಉಪಸ್ಥಿತರಿದ್ದರು.

ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವರಲಕ್ಮೀ ಸೌಹಾರ್ಧ ಸಹಕಾರಿ ಸಂಘದ ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ವಂದಿಸಿದರು.





