ಉಡುಪಿ: ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೈಸನ್ಸ್ ಇಲ್ಲದ ತೋಟೆಕೋವಿಯಲ್ಲಿ ಗುಂಡುಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರದೀಪ್ (32) ಮತ್ತು ಮನೋಜ್ (25)ಆರೋಪಿಗಳಾಗಿದ್ದಾರೆ.
ಇವರು ಹಿರಿಯಡ್ಕ ಠಾಣೆ ವ್ಯಾಪ್ತಿಯ ಕಣಜಾರು ಗುರುರಾಜ್ಮಂಜಿತ್ತಾಯರರ ಮನೆಯ ಸಮೀಪದ ಹಾಡಿಯ ಬಳಿ ಶಿಕಾರಿ ಮಾಡುವ ಉದ್ದೇಶದಿಂದ ಹೋಗಿದ್ದರು ಎನ್ನಲಾಗಿದೆ.

ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸದೇ ಅಜಾಗರೂಕತೆಯಿಂದ ಬಂದೂಕಿನಿಂದ ಗುಂಡು ಹಾರಿಸಿದ್ದು , ಗುಂಡು ಕಾರಿನ ಗಾಜಿಗೆ ತಾಗಿ, ಮರದ ಬಾಗಿಲಿಗೆ ಬಡಿದಿದೆ ಅನ್ನುವ ಮಾಹಿತಿ ಇದೆ.
ಬಂಧನ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಲೈಸನ್ಸ್ ಇಲ್ಲಂದ ತೋಟೆ ಕೋವಿ (ಅಂದಾಜು ಮೌಲ್ಯ 50 ಸಾವಿರ ರೂ), 7 ತೋಟೆಗಳು, ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ (ಅಂದಾಜು ಮೌಲ್ಯ 40 ಸಾವಿರ ರೂ) ನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



