ಮಂಗಳೂರು: ಯುವ ಲೇಖಕಿ ಫಾತಿಮಾ ರಲಿಯಾ ಅವರ ಕೀಮೋ’ ಅನುಭವ ಕಥನಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು.

ಫಾತಿಮಾ ರಲಿಯಾ ಅವರ ಅನುಭವ ಕಥನ ಕೀಮೋ’ ಪುಸ್ತಕವನ್ನು ಹಿರಿಯ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ, ಆರೋಗ್ಯ, ಸಾಹಿತ್ಯ, ರಂಗಭೂಮಿ, ಬ್ಯಾಂಕಿಂಗ್, ವೈದ್ಯಕೀಯ ಇತ್ಯಾದಿ ವಲಯಗಳಲ್ಲಿನ ಸಾಧನೆಗಳ ಮೂಲಕ ಬುದ್ಧಿವಂತರ ಜಿಲ್ಲೆ ಎಂದು ಹೇಳಿಕೊಳ್ಳುತ್ತಿದ್ದ ನಮ್ಮಲ್ಲೀಗ ಮತೀಯವಾದವು ತಾಂಡವಾಡುತ್ತಿದೆ. ದಿನನಿತ್ಯ ಕರಾವಳಿಯ ಈ ಜಿಲ್ಲೆಯಲ್ಲಿ ದಾಳಿ ಹೆಚ್ಚುತ್ತಿವೆ. ಇದರಿಂದ ನಮ್ಮನ್ನು ನಾವೇ ಚಿಕಿತ್ಸಕ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕರಾವಳಿಯ ಈ ರೋಗ ಶಮನಕ್ಕೆ ಮದ್ದು ಕಂಡು ಹಿಡಿಯಬೇಕಿದೆ ಎಂದು ಹೇಳಿದರು.

ಈ ವೇಳೆ ಶಾಲಾ ಶಿಕ್ಷಕಿ ರಮ್ಯ ಕೆ.ಜಿ. ಮೂರ್ನಾಡು ಮತ್ತು ಮದ್ರಸ ಶಿಕ್ಷಕ ಶರೀಫ್ ಹಿಮಮಿ ಶೆಟ್ಟಿ ಕೊಪ್ಪ ಅವರು ಪುಸ್ತಕದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.



