ಬಂಟ್ವಾಳ: ಇಲ್ಲಿನ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಬಡಗುಂಡಿ ಸಮೀಪದ ಕೀಲ್ತೋಡಿ ಮೋರಿ ಬಳಿ ಕಿಡಿಗೇಡಿಗಳು ಅಪಾರ ಪ್ರಮಾಣದ ಪ್ರಾಣಿ ಮಾಂಸದ ತ್ಯಾಜ್ಯ ರಾಶಿ ಸುರಿದು ಪರಾರಿಯಾದ ಘಟನೆ ಬುಧವಾರ ಬೆಳಿಕಿಗೆ ಬಂದಿದೆ.

ಈ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಭಾರೀ ದುರ್ವಾಸನೆ ಬೀರಿದ ಹಿನ್ನೆಲೆಯಲ್ಲಿ ಸ್ಥಳೀಯರು ನಾವೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಗ್ರಾಮಾಂತರ ಠಾಣೆ ಪೊಲೀಸರು ವೈದ್ಯಾಧಿಕಾರಿ ಮತ್ತು ಪಶು ವೈದ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಈ ಸ್ಥಳದಲ್ಲಿ ಮೃತ ಕರು ಕೂಡಾ ಪತ್ತೆಯಾಗಿದ್ದು, ಆಡು, ಜಾನುವಾರು ಮತ್ತು ಕೋಳಿ ತ್ಯಾಜ್ಯ ಕಂಡು ಬಂದಿದ್ದು, ಇದನ್ನು ಪಿಕಪ್ ವಾಹನದಲ್ಲಿ ತಂದು ಸುರಿದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ ರಾಬಟ್ರ್ , ಮಾಜಿ ಸದಸ್ಯರಾದ ಸದಾನಂದ ಗೌಡ ನಾವೂರ, ಜನಾರ್ದನ್ ಮತ್ತಿತರರು ಇದ್ದರು.

ಕಾನೂನು ಕ್ರಮಕ್ಕೆ ಆಗ್ರಹ
ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ಮಾಡಿದ ಬಳಿಕ ಗೋಮಾಂಸದ ತ್ಯಾಜ್ಯವನ್ನು ನೇತ್ರಾವತಿ ನದಿ ಸಮೀಪದ ಮೋರಿಯೊಂದರ ಬಳಿ ಸುರಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಆಗ್ರಹಿಸಿದೆ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ನೇತ್ರಾವತಿ ನದಿ ನೀರನ್ನು ವಿವಿಧ ದೇವಾಲಯಗಳಿಗೆ ಬಳಸಲಾಗುತ್ತಿದ್ದು, ನೀರು ಅಪವಿತ್ರಗೊಳಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ಹುನ್ನಾರ ಇದರಲ್ಲಿ ಇದೆ ಎಂದು ಆರೋಪಿಸಿ ಸಂಘಟನೆ ಮುಖಂಡ ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ತಿಲಕ್ ಕಿಣಿ, ಸಾಗರ್ ಕೊಯಿಲ, ಸಂದೇಶ್ ಕಾಡಬೆಟ್ಟು ಇವರು ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.



